No Ads

ಪ್ರಜಾಧ್ವನಿ ಸಮಾವೇಶದಲ್ಲಿ ಸಂಯುಕ್ತ ಪಾಟೀಲ್‌ ಪರ ಭರ್ಜರಿ ಮತಯಾಚನೆ

ಜಿಲ್ಲೆ 2024-05-03 17:31:28 116
post

ಬಾಗಲಕೋಟೆ: ಬಾಗಲಕೋಟೆಯ ನವನಗರದ ಅಂಜುಮಾನ್‌ ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶ ಅಭೂತಪೂರ್ವವಾಗಿ ಯಶಸ್ವಿಯಾಯಿತು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಅವರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸೇರಿದಂತೆ ಹಲವು ಸಚಿವರು, ನಾಯಕರು ಮಾತನಾಡಿದರು. ಯುವನಾಯಕಿಯನ್ನು ಗೆಲ್ಲಿಸಿ ಸಂಸತ್ತಿನಲ್ಲಿ ಜಿಲ್ಲೆಯ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಅವರಿಗೆ ಮತವೆಂಬ ಆಶೀರ್ವಾದ ನೀಡಿ ಎಂದು ಎಲ್ಲರೂ ಮನವಿ ಮಾಡಿದರು.   ಸಂಯುಕ್ತ ಪಾಟೀಲ್‌ ಗೆದ್ದೇ ಗೆಲ್ತಾರೆ ನಿಕೇತ್‌ ರಾಜ್‌ ಮೌರ್ಯ ಅವರು ಮಾತನಾಡಿ, ಸಂಯುಕ್ತ ಪಾಟೀಲ್‌ ಗೆದ್ದೇ ಗೆಲ್ತಾರೆ, ಎಂ ಪಿ ಆಗ್ತಾರೆ ಎಂಬ ವಿಶ್ವಾಸ ಇದೆ. ನಮ್ಮ ಹೆಣ್ಣು ಮಕ್ಕಳು ಕಾಂಗ್ರೆಸ್‌ ಜೊತೆ ನಿಲ್ಲಲು ತೀರ್ಮಾನ ಮಾಡಿದ್ದಾರೆ ಎಂದರು. ನಮ್ಮ ಮನೆಯ ಹೆಣ್ಣು ಮಗಳನ್ನು ಗೆಲ್ಲಿಸುವ ಚುನಾವಣೆ ಎಂಬುದು ನಮ್ಮೆಲ್ಲರ ಹೃದಯದಲ್ಲೊ ಅಚ್ಚೊತ್ತಿದೆ. ಇಂದು ಎಲ್ಲೆಡೆ ಒಂದೇ ಮಾತು, ಭಾಗ್ಯಗಳ ರಾಜ್ಯ, ಅನ್ನರಾಮಯ್ಯ ಆಗಿದ್ದಾರೆ. ಕನ್ನಡಿಗರ ಧ್ವನಿಯಾಗಿದ್ದಾರೆ. ಮೋದಿ ದುರಾಡಳಿತದ ವಿರುದ್ಧ ಮಾತನಾಡುವ ಸಾಮರ್ಥ್ಯ ಇರುವವರು ಸಿದ್ದರಾಮಯ್ಯ ಅವರೊಬ್ಬರಿಗೆ ಎಂದರು. ದೇಶದ ಜನರನ್ನು ಸುಲಭವಾಗಿ ಮಂಗ ಮಾಡಹುದು ಎಂದು ಮೋದಿ ತಿಳಿದಿದ್ದರು. ಆದರೆ ಜನ ದಡ್ಡರಲ್ಲ. ಕರ್ನಾಟಕ ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ಇಡೀ ದೇಶದ ಜನ ಚರ್ಚೆ ಮಾಡ್ತಾ ಇದ್ದಾರೆ. ಕಾಂಗ್ರೆಸ್‌ ಅನ್ನು ದೇಶದಲ್ಲಿ ಸೋಲಿಸಲು ಸಾಧ್ಯವಿಲ್ಲ. ಕೆಟ್ಟ ಸೋಲಿನ ನಂತರ ತಲೆ ಎತ್ತಿ ನಿಂತಿದ್ದು ಕರ್ನಾಟಕದಿಂದ ಎಂದರು. ಇಂದಿರಾ ಅವರು ಕರ್ನಾಟಕದಲ್ಲಿ ಗೆದ್ದು ಇಡೀ ದೇಶದಲ್ಲಿ ಗೆದ್ದರು. ರಾಜೀವ್‌ ಗಾಂಧಿ ಮೃತಪಟ್ಟ ನಂತರ ಸೋನಿಯಾ ಗಾಂಧಿ ಅವರು ಬಳ್ಳಾರಿಯಲ್ಲಿ ಸ್ಪರ್ಧಿಸುವಂತೆ ಮಾಡಿ ಗೆಲುವು ಸಾಧಿಸಿದರು. ಆನಂತರ ಹತ್ತು ವರ್ಷ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂತು. ಕರ್ನಾಟಕದಲ್ಲಿ ಮತ್ತೆ ಕಾಮಗ್ರೆಸ್‌ ಬಾವುಟ ಹಾರಿದೆ. ಆದ್ರಿಂದ ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂಬುದು ಸಾಬೀತಾಗಿದೆ ಎಂದರು. ಜಾತಿ ಧರ್ಮದ ವಿಚಾರವನ್ನೇ ಬಿಜೆಪಿಯವರು ಈ ಹಿಂದೆ ಚರ್ಚೆ ಮಾಡುತ್ತಿದ್ದರು. ಈಗ ಟಿ ವಿ ಹಾಕಿದರೆ ಹಿಂದೂ ಮುಸ್ಲಿಂ ಚರ್ಚೆ ಇಲ್ಲ. ಇಡೀ ರಾಜ್ಯ ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡ್ತಾ ಇದೆ. ಇದಕ್ಕೆಲ್ಲ ಕಾರಣ ಕಾಂಗ್ರೆಸ್‌ ಎಂದು ವಿವರಿಸಿದರು. ಗ್ಯಾರಂಟಿ ನೋಡಿ ಸಹಿಸಲು ಸಾಧ್ಯವಾಗದ ಬಿಜೆಪಿ ಟೀಕೆ ಮಾಡ್ತ ಇದ್ದಾರೆ. ಮೋದಿ ಅವರೂ ಟೀಕೆ ಮಾಡ್ತಾರೆ. ಅಪಹಾಸ್ಯ ಮಾಡಿದವರೇ ಈಗ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ನಮ್ಮ ಗ್ಯಾರಂಟಿಗೆ ಅವರು ತಮ್ಮ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಎಂದರು.  ಪೆಟ್ರೋಲ್, ಡೀಸೆಲ್ ಬೆಲೆ ವಿಪರೀತ ಏರಿಕೆ ಆಗಿದೆ. ಬಂಗಾರದ ಬೆಲೆ ಗಗನಕ್ಕೇರಿದೆ. ಬಡವರು ಮನೆ ಕಟ್ಟಲು ಆಗ್ತಾ ಇಲ್ಲ. ಬೆಲೆ ಇಳಿಕೆ ಮಾಡ್ತೀನಿ ಎಂದವರು, ಬೆಲೆ ಏರಿಕೆ ಮಾಡಿದ್ದು. ಬಡವರ ಪರ ಸರ್ಕಾರ ಬೇಕು ಎಂದು ತೀರ್ಮಾನಿಸಿದ್ದಾರೆ ಎಂದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಸಿಯುತ್ತಾರೆ ಎಂದು ಮೋದಿ ಹೇಳುತ್ತಾರೆ. ಮನೆಯ ಹೆಣ್ಣು ಮಕ್ಕಳ ಮಾಂಗಲ್ಯ ಗಟ್ಟಿ ಮಾಡಿದ್ದು ಕಾಂಗ್ರೆಸ್. ಬಡವರ ಬದುಕಿನ ಉಸಿರಾದ ಕಾಂಗ್ರೆಸ್‌ ಬೆಂಬಲಿಸಿ ಎಂದರು.  ಸಹಕಾರ ಸಚಿವ ರಾಜಣ್ಣ ಅವರು ಮಾತನಾಡಿ, ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದಾಗ ಹೇಳಿದ ಮಾತನ್ನು ನಡೆಸಿಕೊಡಲಿಲ್ಲ. ಉದ್ಯೋಗ ಕೊಡ್ತೀವಿ, ಕಪ್ಪು ಹಣ ತರ್ತಿವಿ ಅಂದರು, ರೈತರ ಸಾಲ ಮನ್ನಾ ಮಾಡ್ತೇವೆ ಎಂದರು. ಆದರೆ ಯಾವುದನ್ನೂ ಮಾಡಲಿಲ್ಲ ಎಂದರು. ಮೊಹಮ್ಮದ್‌ ನಲಪಾಡ್‌ ಹ್ಯಾರಿಸ್‌ ಅವರು ಮಾತನಾಡಿ, ಕ್ಷೇತ್ರದಲ್ಲಿ ಯುವನಾಯಕಿ ಸಂಯುಕ್ತ ಪಾಟೀಲ್‌ ಅವರಿಗೆ ಟಿಕೆಟ್‌ ನೀಡಿದೆ.  ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್‌ ಬಿ ತಿಮ್ಮಾಪುರ ಮಾತನಾಡಿ, ಧರ್ಮದ ಮಾತಿನಿಂದ ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ. ಧರ್ಮವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ದೇಶವನ್ನು ಒಡೆದು ಅಶಾಂತಿ ನಿರ್ಮಿಸುತ್ತಿರುವ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು. ಸಮಾರಂಭದಲ್ಲಿ ಅಭ್ಯರ್ಥಿ ಸಂಯುಕ್ತ ಪಾಟೀಲ್‌, ಸಚಿವರಾದ ಕೆ ಎನ್‌ ರಾಜಣ್ಣ, ಶಿವಾನಂದ ಪಾಟೀಲ್‌, ಶಾಸಕರಾದ ವಿಜಯಾನಂದ ಕಾಶಪ್ಪನವರ್‌, ಭೀಮಸೇನ್‌ ಚಿಮ್ಮನಕಟ್ಟಿ, ಎಚ್‌ ವೈ ಮೇಟಿ, ಪ್ರದೀಪ್‌ ಈಶ್ವರ್‌, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ನಂಜಯ್ಯನಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಕ್ಷಿತಾ ಈಟಿ, ಆನಂದ ನ್ಯಾಮಗೌಡ, ಅಜಯ್‌ ಕುಮಾರ್‌ ಸರ್‌ ನಾಯಕ್‌, ಪಕ್ಷದ ಮುಖಂಡರಾದ ಬಿ ಆರ್‌ ಯಾವಗಲ್‌, ಎಂ ಪಿ ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು.

No Ads
No Reviews
No Ads

Popular News

No Post Categories
Sidebar Banner
Sidebar Banner